POWER SAMACHARA | KANNADA NEWS | BREKING NEWS| 02-09-2023..
ದಾವಣಗೆರೆ: ಆಕೆ ಹೆಸರು ಸೌಮ್ಯ, ಹೆಸರಿಗಷ್ಟೇ ಇವಳು ಸೌಮ್ಯ, ಇವಳ ಕಾರ್ಯ ವೈಖರಿ ಮಾತ್ರ ಖಡಕ್ ಅಂಡ್ ಪವರ್ ಫುಲ್, ಸದ್ದಿಲ್ಲದೇ ಇವಳು ಮಾಡೋ ಕೆಲಸ ಹಲವರ ಮೆಚ್ಚುಗೆಗೆ ಪಾತ್ರವಾಗಿದೆ, ಪ್ರಧಾನಿ, ಸಿಎಂ ಯಾರೇ ಬರಲಿ ಇವಳು ಇರಲೇಬೇಕಿತ್ತು, ಆದರೆ ಅವಳಿನ್ನೂ ನೆನಪು ಮಾತ್ರ.. ಅಯ್ಯೋ ಯಾರಿವಳು, ಇವಳಿಗೇನಾಯ್ತು ಅಂತೀರ.. ಈ ಸ್ಟೋರಿ ನೋಡಿ.. ನಿಮಗೆ ಗೊತ್ತಾಗುತ್ತೆ..
ಪೊಲೀಸ್ ಇಲಾಖೆಗೆ ಮೂರನೇ ಶಾಕ್..
ಹೌದು.. ಇವಳ ಹೆಸರು ಸೌಮ್ಯ, ಇವಳು ಮಾಡಿರುವ ಸಾಧನೆ ಅಪಾರ, ಅನನ್ಯ, ವಿಧ್ವಂಸಕ ಕೃತ್ಯ ಎಸಗುವವರ ನರನಾಡಿಯಲ್ಲೂ ಕಂಪನ ಬರುವಂತೆ ಕೆಲಸ ಮಾಡುತ್ತಿದ್ದಾಕೆ. ಇವಳು ಬೇರೆ ಯಾರು ಅಲ್ಲ, ಇವಳೇ ಪೊಲೀಸ್ ಶ್ವಾನ, ಶ್ವಾನ ದಳದಲ್ಲಿ ತನ್ನದೇ ಆದ ಛಾಪು ಮೂಡಿಸಿದಾಕೆ. ಸ್ಥಳೀಯ ಮಟ್ಟದ ಚುನಾವಣೆಯಿಂದ ಹಿಡಿದು ಪ್ರಧಾನಿ ನರೇಂದ್ರ ಮೋದಿ ಅವರು ಆಗಮನದ ವೇಳೆಯಲ್ಲಿ ಪರಿಶೀಲನೆಯ ನಿಪುಣೆಯಾಗಿದ್ದ ಸೌಮ್ಯ ಈಗ ನೆನಪು ಮಾತ್ರ, ಸೌಮ್ಯ ದಾವಣಗೆರೆ ಜಿಲ್ಲೆ ಪೊಲೀಸ್ ಶ್ವಾನ ಹಲವು ವಿಶೇಷತೆ ಹೊಂದಿದೆ. ಕೇವಲ ನಾಲ್ಕು ವರ್ಷಗಳಲ್ಲಿ ಅದ್ವಿತೀಯ ಸೇವೆ ನೀಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಯಾವುದೇ ಕಾರ್ಯಕ್ರಮಗಳಿದ್ದರೂ ಮುಂಚಿತವಾಗಿಯೇ ಸೌಮ್ಯಳ ಎಂಟ್ರಿ ಆಗುತಿತ್ತು. ಈಕೆ ಇದ್ದರೆ ಎಲ್ಲಾ ಕೆಲಸವೂ ಸಲೀಸು ಎಂಬಂತಿತ್ತು. ಯಾಕೆಂದರೆ ಅಷ್ಟು ಕರಾರುವಾಗಿ ಕೆಲಸ ಮಾಡ್ತಾ ಇದ್ದವಳು. ಪೊಲೀಸ್ ಇಲಾಖೆಗೆ ತನ್ನದೇ ಆದ ಸೇವೆ ಸಲ್ಲಿಸಿ ಈಗ ವಿಧಿವಶವಾಗಿದೆ. ದಾವಣಗೆರೆ ಪೊಲೀಸ್ ಇಲಾಖೆಗೆ ಮೂರನೇ ಪೆಟ್ಟು ಇದಾಗಿದೆ. ಈ ಹಿಂದೇ ತುಂಗಾ ಡಾಗ್, ಪೂಜಾ ಡಾಗ್ ಕೂಡ ಅನಾರೋಗ್ಯದಿಂದ ಸಾವನ್ನಪ್ಪಿದ್ದವು, ತುಂಗಾ ಡಾಗ್, ಪೂಜಾ ಡಾಗ್ ಪೊಲೀಸ್ ಇಲಾಖೆಯ ಅಚ್ಚುಮೆಚ್ಚಿನ ಡಾಗ್ ಆಗಿತ್ತು, ಕೊಲೆಗಡುಕರು, ಪಾತಕಿಗಳಿಗೆ ನಡುಕು ಉಂಟು ಮಾಡಿದ್ದವು, ಆದರೆ ದುರಾದೃಷ್ಟವಶಾತ್ ಅನಾರೋಗ್ಯದಿಂದ ತುಂಗಾ ಹಾಗೂ ಪೂಜಾ ಸಾವನ್ನಪ್ಪಿದ್ದವು, ಆದರೆ ಈಗ ಇಲಾಖೆಗೆ ಮತ್ತೊಂದು ಶಾಕ್e ಎದುರಾಗಿದ್ದು, ಸೌಮ್ಯ ಡಾಗ್ ಸಾವನ್ನಪ್ಪಿದೆ, ಈ ಮೂರು ಆಕ್ಟಿವ್ ಡಾಗ್ ಗಳು ಸಾವನ್ನಪ್ಪಿದ ಹಿನ್ನಲೆ ಮತ್ತೊಂದು ಚಾಕ್ಯಚಕ್ಯತೆಯಿಂದ ಇರುವ ತಾರಾ ಮೇಲೆ ಹೊರೆ ಬಿದ್ದಿದೆ..
ಸಾಯಸಿ ಸೌಮ್ಯ, ಸೇವೆ ಅನನ್ಯ..
2018ರ ಜೂನ್. 8ರಂದು ಜನಿಸಿದ ಲ್ಯಾಬ್ರಡಾರ್ ಶ್ವಾನ ತಳಿಗೆ ಸೌಮ್ಯ ಎಂದು ಹೆಸರು ನಾಮಕರಣ ಮಾಡಲಾಗಿತ್ತು. ಒಂದು ವರ್ಷದಲ್ಲಿದ್ದಾಗ ಈ ಶ್ವಾನ 2019ರಲ್ಲಿ ಮೇ ತಿಂಗಳಲ್ಲಿ ಪೊಲೀಸ್ ಇಲಾಖೆಗೆ ಸೇರಿತ್ತು. ಅಲ್ಲಿಂದ ಅಮೂಲ್ಯ ಸೇವೆ ನೀಡುತ್ತಿತ್ತು. ಆದರೆ, ಕಳೆದ ಏಳು ದಿನಗಳಿಂದ ರೋಗಕ್ಕೆ ತುತ್ತಾಗಿತ್ತು. ನಾಲ್ಕೈದು ದಿನಗಳ ಹಿಂದೆ ಆಹಾರವನ್ನೂ ತ್ಯಜಿಸಿತ್ತು. ಕೊನೆಯಲ್ಲಿ ಚಿಕಿತ್ಸೆ ಫಲಿಸದೇ ಪ್ರಾಣ ಬಿಟ್ಟಿದೆ. ಸೌಮ್ಯ ಸಾಧನೆ ಕೇಳಿದರೆ ಬೆರಗಾಗುವುದು ಖಚಿತ. ಸ್ಫೋಟಕ ಪತ್ತೆಗಳ ಕಾರ್ಯ, ವಿವಿಐಪಿ, ವಿಐಪಿ ಭದ್ರತಾ ತಪಾಸಣೆ ಸೇರಿದಂತೆ ಹಲವು ರೀತಿಯಲ್ಲಿ ಪೊಲೀಸ್ ಇಲಾಖೆಗೆ ನೆರವಾಗಿತ್ತು. ತನ್ನ ಕಾರ್ಯವೈಖರಿಯಿಂದಲೇ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಸ್ಫೋಟಕ ಪತ್ತೆ ವಿಭಾಗದಲ್ಲಿ ಸೌಮ್ಯ ಕಾರ್ಯನಿರ್ವಹಿಸಿತ್ತು. ಬರೋಬ್ಬರಿ 225 ಭದ್ರತಾ ಕರ್ತವ್ಯಗಳಲ್ಲಿ ಭಾಗೀಯಾಗಿದೆ, ನಾಲ್ಕಕ್ಕೂ ಹೆಚ್ಚು ಸ್ಫೋಟಕ ಪ್ರಕರಣಗಳನ್ನ ಭೇದಿಸಿದೆ. ನಾಲ್ಕು ಭಾರೀ ರಾಷ್ಟ್ರಪತಿ, ಉಪರಾಷ್ಟ್ರಪತಿ ಕರ್ತವ್ಯಗಳು, 64 ಮುಖ್ಯಮಂತ್ರಿಗಳ ಕರ್ತವ್ಯಗಳು, 12 ಭಾರೀ ಪ್ರಧಾನ ಮಂತ್ರಿಗಳು ಬಂದಾಗ ಕರ್ತವ್ಯಗಳನ್ನು ನಿಭಾಯಿಸಿದೆ, ರಾಹುಲ್ ಗಾಂಧಿಯವರ ಭಾರತ್ ಜೂಡೋ ಯಾತ್ರೆ, ಜಿ-20 ಶೃಂಗಸಭೆ, ಕೇಂದ್ರ ಗೃಹಮಂತ್ರಿಗಳ ಕರ್ತವ್ಯಗಳು, ದಸರಾ ಉತ್ಸವ, ಅಧಿವೇಶನ, ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಕರ್ತವ್ಯಗಳು ಒಂದಾ ಎರಡ ಹೇಳುತ್ತಾ ಹೋದರೆ ಸಮಯ ಸಾಲೋದಿಲ್ಲ, ಅಷ್ಟೆ ಯಾಕೆ, ದಾವಣಗೆರೆಯಲ್ಲಿ ಪೊಲೀಸ್ ಇಲಾಖೆಯ ಖಡಕ್ ಶ್ವಾನ ಕಾಡಜ್ಜಿ ಗ್ರಾಮದಲ್ಲಿ ಗೋದಾಮಿನಲ್ಲಿದ್ದ ಸ್ಫೋಟಕ ಪತ್ತೆ ಕಾರ್ಯದಲ್ಲಿ ಮುಂಚೂಣಿ ಪಾತ್ರ ವಹಿಸಿತ್ತು, ಕಾಶಿಪುರ ಗ್ರಾಮದ ಜಮೀನಿನಲ್ಲಿ ಜಿಲೇಟಿನ್ ಪತ್ತೆ ಕಾರ್ಯಾಚರಣೆ ಮಾಡಿತ್ತು, ಮಾಯಕೊಂಡದ ಕಬ್ಬೂರು ಗ್ರಾಮದ ಜಮೀನಿನಲ್ಲಿ ಅನುಮಾನಾಸ್ಪದ ವಸ್ತು ಬಿದ್ದಾಗ ಪತ್ತೆ ಕಾರ್ಯ ನಡೆಸಿತ್ತು, ಅಂತರಾಷ್ಟ್ರೀಯ ಮತ್ತು ಐಪಿಎಲ್ ಮ್ಯಾಚ್ ಕರ್ತವ್ಯಗಳು ನಿಭಾಯಿಸಿದೆ, ಲೋಕಸಭೆ ಚುನಾವಣೆ ಸೇರಿದಂತೆ ಹಲವು ಚುನಾವಣೆ ವೇಳೆ ತಪಾಸಣೆ ಕಾರ್ಯ ನಿರ್ವಹಿಸಿದೆ, ಪ್ರತಿದಿನ ಕೋರ್ಟ್, ಬಸ್ ನಿಲ್ದಾಣ, ರೈಲು ನಿಲ್ದಾಣಗಳ ತಪಾಸಣೆ ಕಾರ್ಯ ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆ, ರಂಜಾನ್ ಸೇರಿದಂತೆ ಹಲವು ವಿಧ್ವಂಸಕ ಕೃತ್ಯ ತಪಾಸಣೆ ಕಾರ್ಯಗಳ ನಿರ್ವಹಣೆ ಮಾಡಿದೆ..
ವಕ್ಕರಿತ್ತು ಸ್ಪಿನೋ ಮೆಗಾಲಿನ್ ಎಂಬ ಕಾಯಿಲೆ
ತುಂಬಾ ಚಟುವಟಿಕೆ, ಕ್ರಿಯಾಶೀಲವಾಗಿದ್ದ ಸೌಮ್ಯ ಕಳೆದ ಏಳೆಂಟು ದಿನಗಳ ಹಿಂದೆ ಮಂಕಾಗಿತ್ತು. ಕಣ್ಣು ಮತ್ತು ಬಾಯಿಯಲ್ಲಿ ಬಿಳಿಯಾದ ರೀತಿಯಲ್ಲಿ ಕಂಡು ಬರುತಿತ್ತು. ಕೂಡಲೇ ಚಿಕಿತ್ಸೆ ಕೊಡಿಸಲಾಯಿತು. ಬೆಂಗಳೂರಿನಲ್ಲಿ ನಾಲ್ಕು ದಿನ ಚಿಕಿತ್ಸೆ ನೀಡಿಸಲಾಯಿತಾದರೂ ಬದುಕಲಿಲ್ಲ. ಸ್ಪಿನೋ ಮೆಗಾಲಿನ್ ಎಂಬ ಕಾಯಿಲೆಯಿಂದ ಬಳಲುತ್ತಿದ್ದ ಸೌಮ್ಯ 5 ವರ್ಷ 2 ತಿಂಗಳಿಗೆ ವಯಸ್ಸಿಗೆ ಪ್ರಾಣ ಬಿಟ್ಟಿದೆ. ಪತ್ತೆ ಕಾರ್ಯದಲ್ಲಿ ಮೂಸಿ ನೋಡುವುದೇ ಸೌಮ್ಯಳ ಸಾವಿಗೆ ಕಾರಣ ಎನ್ನಲಾಗ್ತಿದೆ, ಗುಟ್ಕಾ ಜಗಿದು ಕೆಲವರು ಉಗುಳಿರುತ್ತಾರೆ. ಆ ಉಗುಳನ್ನು ಮೂಸುವುದಲ್ಲದೇ, ವಾಸನೆ ಮೂಗಿಗೆ ಬಡಿಯುತ್ತದೆ. ಆದ್ರೆ, ಇದು ನಿಧಾನವಾಗಿ ಶ್ವಾನದ ದೇಹದೊಳಗೆ ಹೋಗುತ್ತದೆ. ಬಲಹೀನವಾದಾಗ ಮಾತ್ರ ಈ ಕಾಯಿಲೆ ಇದೆ ಎಂಬುದು ಗೊತ್ತಾಗುತ್ತದೆ. ರಕ್ತ ಪರೀಕ್ಷೆ ಮಾಡಿಸಿದಾಗ ಈ ವಿಚಾರ ಬೆಳಕಿಗೆ ಬಂದಿದೆ ಎಂದು ಈ ಶ್ವಾನ ನೋಡಿಕೊಳ್ಳುತ್ತಿದ್ದ ಪ್ರಕಾಶ್ ಅವರು ಈ ಮಾಹಿತಿ ನೀಡಿದ್ದಾರೆ.
ಇನ್ನೂ ದುಷ್ಟರ ಎಡೆಮುರಿ ಕಟ್ಟುತ್ತಿದ್ದ ಸೌಮ್ಯ ಸಾವನ್ನಪ್ಪಿದ ಹಿನ್ನಲೆ ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಮುಂದೆ ಸೌಮ್ಯಳಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು. ದಾವಣಗೆರೆ ಎಸ್ಪಿ ಉಮಾ ಪ್ರಶಾಂತ್ ಸೇರಿದಂತೆ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು, ಸಿಬ್ಬಂದಿ ಸೌಮ್ಯಳ ಮೃತದೇಹಕ್ಕೆ ಹೂವಿನ ಹಾರವಿಟ್ಟು ಸೆಲ್ಯೂಟ್ ಮಾಡಿ ಗೌರವ ಸಲ್ಲಿಸಿದರು, ಒಟ್ಟಾರೆ ಪೊಲೀಸ್ ಇಲಾಖೆಯ ತಪಾಸಣೆ, ಸ್ಫೋಟಕ ಪತ್ತೆಯಲ್ಲಿ ನಿಪುಣತೆ ಚಾಣಾಕ್ಷತೆಯಿಂದ ಇಲಾಖೆಗೆ ಬೆನ್ನೆಲುಬಾಗಿದ್ದ ಸೌಮ್ಯ ಸಾವು ತುಂಬಲಾರದ ನಷ್ಟವಾಗಿದೆ..