<h3><strong>POWER SAMACHARA | KANNADA NEWS | BREKING NEWS| 30-08-2023..</strong></h3> <h3><strong>ದಾವಣಗೆರೆ</strong> :ಕಾಂಗ್ರೆಸ್ ಗ್ಯಾರಂಟಿಗಳಿಗೆ ಕೇಂದ್ರ ಸರ್ಕಾರ ಬೆಚ್ಚಿಬಿದ್ದಿದೆ, ಕಾಂಗ್ರೆಸ್ ಗ್ಯಾರಂಟಿಗೆ ಹೆದರಿ ಕೇಂದ್ರ ಸಿಲಿಂಡರ್ ದರ ಕಡಿಮೆ ಮಾಡಿದೆ ಎಂದು ದಾವಣಗೆರೆಯಲ್ಲಿ ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಹೇಳಿಕೆ ನೀಡಿದ್ದಾರೆ...</h3> <h3>ಬುಧವಾರ ದಾವಣಗೆರೆ ಹದಡಿ ರಸ್ತೆಯಲ್ಲಿನ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಸಮುದಾಯ ಭವನದಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಮಹಾನಗರ ಪಾಲಿಕೆ ಇವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾದ ಮನೆಯೊಡತಿಗೆ ಪ್ರತಿ ತಿಂಗಳು ಎರಡು ಸಾವಿರ ರೂ.ಗಳನ್ನು ನೀಡುವ ಗೃಹಲಕ್ಷ್ಮಿ ಯೋಜನೆ ಚಾಲನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಲೋಕಸಭಾ ಚುನಾವಣೆಗೆ ಕೇಂದ್ರ ಸರ್ಕಾರ ಹೆದರಿದೆ, ಎಲ್ಲೆಡೆ ಗ್ಯಾರಂಟಿ ಜನಪ್ರಿಯವಾಗಿದೆ, ಹೀಗಾಗಿ ಸಿಲಿಂಡರ್ ದರ ಕಡಿಮೆ ಮಾಡಿದೆ, ಕಾಂಗ್ರೆಸ್ ಗ್ಯಾರಂಟಿಯಿಂದ ರಾಜ್ಯ ದಿವಾಳಿ ಆಗತ್ತೆ ಅಂತ ಬಿಜೆಪಿ ಅಪಪ್ರಚಾರ ಮಾಡ್ತಿದೆ, ಬಿಜೆಪಿಗೆ ಮಾತುಗಳ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ, ಗೃಹಲಕ್ಷ್ಮಿಯರು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಉತ್ತರ ಕೊಡಬೇಕಿದೆ, ಗೃಹಲಕ್ಷ್ಮಿ ಫಲನುಭವಿಗಳು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಬೆಂಬಲ ಕೊಡಬೇಕು ಎಂದರು. ಸಾಮಾಜಿಕ ನ್ಯಾಯದ ಪರಿಕಲ್ಪನೆ ಮತ್ತು ಇದನ್ನು ಎತ್ತಿ ಹಿಡಿಯುವುದಕ್ಕೆ ಚುನಾವಣೆ ಸಂದರ್ಭದಲ್ಲಿ 5 ಗ್ಯಾರಂಟಿ ಕೊಟ್ಟು, ಪ್ರಾರಂಭಿಸಲಾಗಿದೆ. ಜನರಿಗೆ ಹಸಿವು ಮುಕ್ತತೆ, ವಾಸಿಸಲು ಸೂರು, ಆರೋಗ್ಯ ಸಂರಕ್ಷಣೆ ಮತ್ತು ಎಲ್ಲರಿಗೂ ಶಿಕ್ಷಣ ನೀಡುವುದು ನಮ್ಮ ಆದ್ಯತೆಯಾಗಿದೆ, ಪ್ರಮುಖವಾಗಿ ಚುನಾವಣೆ ಸಂದರ್ಭದಲ್ಲಿ ಐದು ಗ್ಯಾರಂಟಿಗಳನ್ನು ಘೋಷಣೆ ಮಾಡಲಾಗಿತ್ತು ಎಂದರು..</h3> <img class="wp-image-2343 size-full alignnone" src="https://powersamachara.com/wp-content/uploads/2023/08/gruha-lakshmi-start-in-dvg-1.jpg" alt="" width="870" height="570" /> <h3>ಅವುಗಳಲ್ಲಿ ಗೃಹಲಕ್ಷ್ಮಿ ಸೇರಿದಂತೆ ನಾಲ್ಕು ಗ್ಯಾರಂಟಿಗಳನ್ನು ಜಾರಿ ಮಾಡಲಾಗಿದೆ. ಸಾರಿಗೆ ಸಂಸ್ಥೆಗಳಲ್ಲಿ ರಾಜ್ಯದ ಮಹಿಳೆಯರು ಉಚಿತವಾಗಿ ಪ್ರಯಾಣಿಸುವ ಶಕ್ತಿ ಯೋಜನೆ, ಪ್ರತಿ ಮನೆಗೆ ತಿಂಗಳಿಗೆ 200 ಯುನಿಟ್ಗಳವರೆಗೆ ಉಚಿತ ವಿದ್ಯುತ್ ಬಳಕೆಯ ಗೃಹಜ್ಯೋತಿ ಯೋಜನೆ, ಅನ್ನಭಾಗ್ಯ ಯೋಜನೆಯಡಿ ಪ್ರತಿಯೊಬ್ಬ ಬಿ.ಪಿ.ಎಲ್.ಕುಟುಂಬದವರಿಗೆ ತಿಂಗಳಿಗೆ 10 ಕೆ.ಜಿ.ಧಾನ್ಯದಲ್ಲಿ ಐದು ಕೆ.ಜಿ.ಧಾನ್ಯ ನೀಡಿ ಉಳಿದ 5 ಕೆಜಿಗೆ ನಗದು ಜಮಾ ಮಾಡಲಾಗುತ್ತಿದೆ. ಗೃಹಭಾಗ್ಯ ಯೋಜನೆಯಡಿ ಆಗಸ್ಟ್ 30 ರಿಂದ ಕುಟುಂಬದ ಯಜಮಾನಿಗೆ ಪ್ರತಿ ತಿಂಗಳು ರೂ.2000 ಗಳನ್ನು ನೀಡಲು ಆರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ಪದವೀಧರರಿಗೆ ಮತ್ತು ಡಿಪ್ಲೊಮಾ ಪಾಸಾದವರಿಗೆ ಪ್ರತಿ ತಿಂಗಳು ಎರಡು ವರ್ಷದವರೆಗೆ ರೂ.3000 ಮತ್ತು ರೂ.1500 ಗಳ ಶಿಷ್ಯವೇತನ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತದೆ, ದಾವಣಗೆರೆ ಜಿಲ್ಲೆಯಲ್ಲಿ ಗೃಹಲಕ್ಷ್ಮಿ ಯೋಜನೆಯಡಿ 3,27,472 ಮಹಿಳೆಯವರು ನೊಂದಣಿ ಮಾಡಿಸಿದ್ದಾರೆ. ಇವರಿಗೆ ಇನ್ನು ಮುಂದೆ ಪ್ರತಿ ತಿಂಗಳು ಎರಡು ಸಾವಿರ ಅವರ ಖಾತೆಗೆ ನೇರವಾಗಿ ಜಮೆಯಾಗಲಿದೆ. ಇದಕ್ಕಾಗಿ ಜಿಲ್ಲೆಗೆ 64,80,92,000 ರೂ.ಗಳ ಅನುದಾನವನ್ನು ನೀಡಲಾಗಿದೆ. ಜಿಲ್ಲೆಯಲ್ಲಿ ಇನ್ನೂ ಶೇ 15 ರಷ್ಟು ಮಹಿಳೆಯರು ಯೋಜನೆಯಿಂದ ಹೊರಗಿದ್ದು ಮುಂದಿನ ದಿನಗಳಲ್ಲಿ ಇವರಿಗೂ ಯೋಜನೆಯ ಲಾಭ ಸಿಗಲಿದೆ ಎಂದರು.</h3> <h3>ಮಹಿಳೆಯರಿಗೆ ನೀಡುವ ಈ ಯೋಜನೆಯಿಂದ ಅವರ ಕುಟುಂಬ ನಿರ್ವಹಣೆಗೆ ಮನೆ ಯಜಮಾನಿಗೆ ಸಹಾಯವಾಗಲಿದೆ. ತಮ್ಮ ಮಕ್ಕಳನ್ನು ಓದಿಸಲು, ಮನೆ ನಿರ್ವಹಣೆಗೆ ಬಳಸುತ್ತಾರೆ. ಇದರಿಂದ ಅವರ ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗಲಿದ್ದು ಪುನಃ ಅವರಿಂದ ತೆರಿಗೆ ರೂಪದಲ್ಲಿ ಸರ್ಕಾರಕ್ಕೆ ಆದಾಯ ಬರಲಿದ್ದು ಜನರಿಗೆ ಕೊಟ್ಟ ದುಡ್ಡು ಎಲ್ಲಿಗೂ ಹೋಗುವುದಿಲ್ಲ, ಇದೂ ಕೂಡ ಸರ್ಕಾರಕ್ಕೆ ವರಮಾನವೇ ಹೊರತು ನಷ್ಟವಾಗುವುದಿಲ್ಲ ಎಂದರು.</h3> <h3>ಮಾಯಕೊಂಡ ಶಾಸಕರಾದ ಕೆ.ಎಸ್.ಬಸವಂತಪ್ಪ ಮಾತನಾಡಿ, ನಮ್ಮ ಸರ್ಕಾರ ನುಡಿದಂತೆ ನಡೆಯುತ್ತಿದ್ದು, ಕುಟುಂಬದ ನಿರ್ವಹಣೆಗೆ ಅನುಕೂಲವಾಗಲು ಮನೆಯ ಯಜಮಾನಿಗೆ ಗೃಹಲಕ್ಷ್ಮಿ ಯೋಜನೆಯಿಂದ ಪ್ರತಿ ತಿಂಗಳು ರೂ 2000 ಗಳನ್ನು ನೀಡಲಾಗುತ್ತಿದ್ದು ಯುವನಿಧಿಗೆ ಡಿಸೆಂಬರ್ ನಲ್ಲಿ ಚಾಲನೆ ಸಿಗಲಿದೆ. ಗ್ಯಾರಂಟಿ ಯೋಜನೆಯಡಿ ನೀಡಲಾಗುತ್ತಿರುವ ಹಣ ಕುಟುಂಬ ನಿರ್ವಹಣೆಗೆ ಅಗತ್ಯವಿದ್ದು ಈ ಹಣವನ್ನು ಬ್ಯಾಂಕುಗಳು ಅವರ ಯಾವುದೇ ಸಾಲಕ್ಕೆ ಜಮೆ ಮಾಡಿಕೊಳ್ಳದಂತೆ ಜಿಲ್ಲಾಧಿಕಾರಿಗಳು ಕ್ರಮವಹಿಸಬೇಕು ಎಂದರು.</h3> <h3>ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಎಂ.ವಿ ಮಾತನಾಡಿ, ರಾಜ್ಯದಲ್ಲಿ ಇಂದು ಸುರ್ವರ್ಣಾಕ್ಷರದಲ್ಲಿ ಬರೆದಿಡುವ ದಿನ ಇದಾಗಿದ್ದು, ಎಲ್ಲರಿಗೂ ಸಮಪಾಲು, ಸಮಬಾಳು ಎಂಬ ಧ್ಯೇಯೋದ್ದೇಶದಿಂದ ಮಹಿಳೆಯರ ಸಬಲೀಕರಣ ಹಾಗೂ ಅವರಿಗೆ ಶಕ್ತಿ ನೀಡುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಗೃಹಲಕ್ಷ್ಮಿ ನೊಂದಣಿಗೆ ಜಿಲ್ಲೆಯ ಗ್ರಾಮಾಂತರ ಭಾಗದಲ್ಲಿ 194 ಕೇಂದ್ರ ತೆರೆದಿದ್ದು ಯಾವುದೇ ವೆಚ್ಚವಿಲ್ಲದಂತೆ 3,27,462 ಫಲಾನುಭವಿಗಳನ್ನು ನೊಂದಾಯಿಸಲಾಗಿದೆ. ಈ ಯೋಜನೆ ಅನುಷ್ಟಾನಕ್ಕಾಗಿ ಪಂಚಸೂತ್ರಗಳನ್ನು ಅಳವಡಿಸಿಕೊಳ್ಳಲಾಗಿತ್ತು. ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ಪ್ರಜಾ ಪ್ರತಿನಿಧಿಗಳನ್ನು ಆಯ್ಕೆಮಾಡಿದ್ದು, ಮನೆಮನೆಗೆ ತೆರಳಿ ಗೃಹಲಕ್ಷ್ಮೀ ಯೋಜನೆ ನೊಂದಣಿಯನ್ನು ಯಶಸ್ವಿಗೊಳಿಸಲಾಯಿತು. ನಗರ ಪ್ರದೇಶದಲ್ಲಿ ಅರ್ಜಿ ಸಲ್ಲಿಕೆ ಕಡಿಮೆಯಾಗಿದ್ದು, ಆ ಭಾಗದಲ್ಲಿ ನೊಂದಣಿಗೆ ಹೆಚ್ವಿನ ಆದ್ಯತೆ ನೀಡಿ, ತಾಂತ್ರಿಕ ಸಮಸ್ಯೆಗಳಿಗೆ ಪರಿಹಾರ ಒದಗಿಸಿ ಹೆಚ್ಚಿನ ಜನರನ್ನು ನೊಂದಾಯಿಸಿದ್ದು ಜಿಲ್ಲೆ ರಾಜ್ಯದಲ್ಲಿ ಎರಡನೇ ಸ್ಥಾನದಲ್ಲಿರಲು ಸಹಕಾರಿಯಾಯಿತು ಎಂದರು.</h3> <h3>ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಉಮಾ ಪ್ರಶಾಂತ್ ಮಾತನಾಡಿ, ಎಲ್ಲಿ ಮಹಿಳೆಯರಿಗೆ ಗೌರವ ಸಿಗುತ್ತದೆ, ಅಲ್ಲಿ ದೇವತೆಗಳಿರುತ್ತಾರೆ. ಸಂಸಾರ ಚೆನ್ನಾಗಿರಬೇಕಾದರೆ ಗೃಹಲಕ್ಷ್ಮೀಯರು ಚೆನ್ನಾಗಿರಬೇಕು. ಮಹಿಳೆಯರು ಹಿಂದಿನಿಂದಲೂ ದೌರ್ಜನ್ಯಕ್ಕೆ ಒಳಗಾಗಿದ್ದಾರೆ. ಸ್ತ್ರೀ ತ್ಯಾಗಮಯಿ ಅಷ್ಟೆ ಅಲ್ಲ, ಆರ್ಥಿಕವಾಗಿಯೂ ಸ್ವಾವಲಂಬಿಯಾಗಬೇಕು, ಈ ಯೋಜನೆಯ ಅನುಕೂಲ ಸರಿಯಾದ ರೀತಿಯಲ್ಲಿ ಸದ್ಭಳಕೆ ಮಾಡಿಕೊಂಡು ಸ್ವಾಭಿಮಾನಿಗಳಾಗಬೇಕೆಂದರು.</h3> <h3>ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುರೇಶ್.ಬಿ ಇಟ್ನಾಳ್ ಮಾತನಾಡಿ, ಶೇ 90 ರಷ್ಟು ಮಹಿಳೆಯರು ಗ್ರಾಮಾಂತರ ಪ್ರದೇಶದವರಾಗಿದ್ದು ಅವರ ಸಾರ್ವತ್ರಿಕ ಕನಿಷ್ಠ ಆದಾಯ ಕಲ್ಪಿಸುವ ಯೋಜನೆ ಇದಾಗಿದೆ ಎಂದರು.</h3> <h3><strong>ಫಲಾನುಭವಿಗಳ ಅಭಿಪ್ರಾಯ ಹೇಗಿದೆ ಗೊತ್ತಾ..?</strong></h3> <h3>ಉಮಾ ಜಯಂತ್ ಮಾತನಾಡಿ, ಸರ್ಕಾರದ 5 ಗ್ಯಾರಂಟಿ ಯೋಜನೆಗಳಲ್ಲಿ ನಾನು ನಾಲ್ಕು ಯೋಜನೆಗಳನ್ನು ಪಡೆದಿದ್ದೇನೆ. ಹಿಂದೆ ನಾನು ಬೀದಿಬದಿ ವ್ಯಾಪಾರಿಯಾಗಿದ್ದು ಕೈಸಾಲ ತಂದು ವ್ಯಾಪಾರ ಮಾಡಬೇಕಾಗಿತ್ತು ಈಗ ನನಗೆ ಹಣ ಬರಲಿದ್ದು ಇದರಿಂದ ಇನ್ನಷ್ಟು ಆರ್ಥಿಕ ಶಕ್ತಿ ಬಂದಿದೆ ಎಂದರು. ಮತ್ತೊಬ್ಬ ಫಲಾನುಭವಿ ಶ್ವೇತ ಮಾತನಾಡಿ, ನಾನು ಹೂ ಕಟ್ಟಿ ಮನೆಯಲ್ಲಿ ದಿನಕ್ಕೆ 40, 50 ರೂ. ಗಳಿಸುತ್ತಿದ್ದೆ ಈಗ ನಾನೇ ಹೂ ಖರೀದಿ ಮಾಡಿ ಹೂ ವ್ಯಾಪಾರ ಮಾಡಿ ಇನ್ನೂ ಹೆಚ್ಚಿನ ಲಾಭ ಗಣಿಸಿ ಕುಟುಂಬದ ಆರ್ಥಿಕ ಮಟ್ಟ ಹೆಚ್ಚಿಸಿಕೊಳ್ಳುವೆ ಎಂದರು. ಅನೂಷಾ.ವಿ ಮಾತನಾಡಿ, ನಾನು ನಾಲ್ಕು ಗ್ಯಾರಂಟಿಗಳ ಫಲಾನುಭವಿಯಾಗಿದ್ದು ನನಗೆ ಮತ್ತು ನನ್ನ ಕುಟುಂಬಕ್ಕೆ ಆರ್ಥಿಕ ಶಕ್ತಿ ಸಿಕ್ಕಿದೆ ಎಂದರು.</h3> <h3>ಮಹಾನಗರಪಾಲಿಕೆ ಮೇಯರ್ ವಿನಾಯಕ ಬಿ.ಹೆಚ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಚಮನ್ ಸಾಬ್, ಗಡಿಗುಡಾಳ್ ಮಂಜುನಾಥ್, ಪಾಲಿಕೆ ಸದಸ್ಯರಾದ ಜಯಮ್ಮ ಗೋಪಿನಾಥ್, ಎ.ನಾಗರಾಜ್, ಉಪವಿಭಾಗಾಧಿಕಾರಿ ದುರ್ಗಾಶ್ರೀ ಉಪಸ್ಥಿತರಿದ್ದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ವಾಸಂತಿ ಉಪ್ಪಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಾಲಿಕೆ ಆಯುಕ್ತರಾದ ರೇಣುಕಾ ಸ್ವಾಗತಿಸಿದರು.</h3>