POWER SAMACHARA | KANNADA NEWS | BREKING NEWS| 27-02-2024
ವಿಜಯನಗರ: ಜಿಲ್ಲೆಯ ಹೂವಿನ ಹಡಗಲಿ ತಾಲ್ಲೂಕಿನ ಮೈಲಾರದ ಕಾರ್ಣಿಕ ನುಡಿ ಅಂದ್ರೆ ಕರ್ನಾಟಕ ರಾಜ್ಯವಷ್ಟೆ ಅಲ್ಲದೇ ಇಡೀ ಭಾರತವೇ ತಿರುಗಿ ನೋಡುವಂತಹ ಭವಿಷ್ಯವಾಣಿ ಅಂತಾ ಫೇಮಸ್ಸಾಗಿದೆ, ಆದರೆ ಇಲ್ಲಿನ ಧರ್ಮದರ್ಶಿ, ಗೊರವಯ್ಯ ಹಾಗೂ ಆಡಳಿತ ಮಂಡಳಿಯ ಜಟಾಪಟಿಯಿಂದ ಕಾರ್ಣಿಕಕ್ಕೆ ಕಂಟಕ ಎದುರಾಗಿದೆ..
ಹೌದು.. ಮೈಲಾರಲಿಂಗೇಶ್ವರ ದೇವರ ಕಾರ್ಣಿಕ ಅಂದ್ರೆ ವರ್ಷದ ಭವಿಷ್ಯವಾಣಿ ಅಂತಲೆ ಫೇಮಸ್ಸು. ವಿಜಯ ನಗರದ ಜಿಲ್ಲೆಯ ಹೂವಿನ ಹಡಗಲಿ ತಾಲ್ಲೂಕಿನ ಮೈಲಾರ ಸುಪ್ರಸಿದ್ದಿ ಪಡೆದ ಕ್ಷೇತ್ರಗಳಲ್ಲೊಂದು. ಭರತ ಹುಣ್ಣಿಮೆಯಾಗಿ ಮೂರು ದಿನಕ್ಕೆ ನಡೆಯುವ ವರ್ಷದ ದೈವವಾಣಿ ಕೇಳಲು ಲಕ್ಷಾಂತರ ಜನರು ಆಗಮಿಸುತ್ತಾರೆ. ಕಾರ್ಣಿಕ ವಾಣಿಯು ಮಳೆ, ಬೆಳೆ ಹಾಗೂ ರಾಜಕೀಯವನ್ನ ನಿರ್ಧರಿಸುತ್ತದೆ. ಈ ಕಾರ್ಣಿಕ ಸುಮಾರು ನೂರಾರು ವರ್ಷಗಳ ಇತಿಹಾಸವನ್ನ ಹೊಂದಿದೆ. ಡೆಂಕನಮರಡಿಯಲ್ಲಿ ಲಕ್ಷಾಂತರ ಭಕ್ತರ ಮಧ್ಯ ಆಗಮಿಸಿದ ಗೊರವಯ್ಯ ಸ್ವಾಮೀ 18 ಅಡಿ ಎತ್ತರದ ಬಿಲ್ಲನ್ನೇರಿ ಸದ್ದಲೆ ಅನ್ನುತ್ತಲೆ ನೆರೆದಿದ್ದ ಸಾವಿರಾರು ಜನರು ಮೌನಕ್ಕೆ ಜಾರುತ್ತಾರೆ. ರಾಮಪ್ಪ ಗೊರವಯ್ಯ ಸ್ವಾಮೀ ವರ್ಷದ ಭವಿಷ್ಯವಾಣಿ ನುಡಿದು ಬಿಲ್ಲಿನಿಂದ ಕೆಳಕ್ಕೆ ಬೀಳುತ್ತಾನೆ. ಪ್ರಸಕ್ತ ವರ್ಷ ಬಿಲ್ಲನ್ನೇರಿದ ಗೊರವಯ್ಯ ರಾಮಪ್ಪ 18 ಅಡಿ ಗೊರವಯ್ಯ ಸದ್ದಲೇ ಅನ್ನುತಾ” ಸಂಪಾಯಿತಲೇ ಪರಾಕ್” ಅನ್ನೋ ದೈವವಾಣಿ ನುಡಿದಿದ್ದಾನೆ. ರೈತಾಪಿ ವರ್ಗದ ಜನರಿಗೆ ಮಳೆ ಬೆಳೆಗಳು ಉತ್ತಮವಾಗಲಿದೆ. ಕಳೆದ ವರ್ಷ ಮಳೆ ಸರಿಯಾಗಿ ಆಗಿರಲಿಲ್ಲ, ಈ ಭಾರೀ ಮಳೆ ಬೆಳೆ ಚೆನ್ನಾಗಿ ಆಗಲಿದೆ ಎಂದು ಹಿರಿಯರು ಮಾತನಾಡಿಕೊಳ್ಳುತ್ತಿದ್ದರೆ, ಈ ಭಾರೀ ಪೂರ್ಣ ಕಾರಣಿಕ ಆಗಲಿಲ್ಲ ಎಂದು ಕೆಲವರು ಮಾತನಾಡಿಕೊಳ್ಳುತ್ತಿದ್ದರು..
ಧರ್ಮದರ್ಶಿ ಆರೋಪ ಏನೂ..!
ಪ್ರಸಕ್ತ ವರ್ಷದ ಮೈಲಾರ ಲಿಂಗೇಶ್ವರ ಕಾರ್ಣಿಕ ಹೊರಬಿದ್ದಿದೆ. ಮಳೆ, ಬೆಳೆ ಎಲ್ಲಾ ಸಂಪಾಗುತ್ತದೆ, ರೈತರಿಗೆ ಈ ಬಾರಿ ಒಳ್ಳೆಯ ದಿನಗಳು ಮೂಡಲಿದೆ ಅಂತ ಗೊರವಯ್ಯ ರಾಮಪ್ಪ ಕಾರ್ಣಿಕ ನುಡಿದಿದ್ದಾರೆ. ಆದರೆ ಇದಕ್ಕೆ ದೇವಸ್ಥಾನದ ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್ ಅಪಸ್ವರ ಎತ್ತಿದ್ದು ಭಾರೀ ಸಂಚಲನಕ್ಕೆ ಕಾರಣವಾಗಿದೆ. ಮೈಲಾರ ಲಿಂಗನ ಕಾರ್ಣಿಕ ಸತ್ಯವಾಗಲ್ಲಾ ಅಂತ ದೇವಸ್ಥಾನದ ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್ ಅಪಸ್ವರ ನುಡಿದಿದ್ದು, ಭಕ್ತರನ್ನು ಕೆರಳಿಸಿದೆ. ಈ ಹಿಂದೆ ಗೊರವಯ್ಯ ಮತ್ತು ಧರ್ಮದರ್ಶಿಗೆ ಜಟಾಪಟಿ ನಡೆಯುತ್ತಲೇ ಬಂದಿತ್ತು, ಆದರೆ ಈಗ ವಿಕೋಪಕ್ಕೆ ತಿರುಗಿದೆ. ಮೈಲಾರ ಲಿಂಗೇಶ್ವರನ ಗೊರವಯ್ಯ ರಾಮಪ್ಪ ವಿರುದ್ಧ ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್ ಮತ್ತೆ ತಿರುಗಿಬಿದ್ದಿದ್ದಾರೆ. ಈ ಮೂಲಕ ಧರ್ಮದರ್ಶಿ ವೆಂಕಪ್ಪಯ್ಯ ಹಾಗೂ ಹಾಗೂ ಗೊರವಯ್ಯ ರಾಮಪ್ಪ ನಡುವೆ ಜಟಾಪಟಿ ಮುಂದುವರೆದಂತಾಗಿದೆ. ಜಾತ್ರಾ ಸಂಪ್ರದಾಯದ ನಿಯಮಗಳನ್ನು ಗಾಳಿಗೆ ತೂರಿದ್ದಾರೆ ಅಂತ ಗೊರವಯ್ಯ ರಾಮಪ್ಪ ವಿರುದ್ಧ ಮೈಲಾರ ಲಿಂಗೇಶ್ವರ ದೇಗುಲದ ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್ ಆರೋಪಿಸಿದ್ದಾರೆ. ಗುರುಪೀಠದ ಧರ್ಮದ ನಿಯಮಗಳನ್ನು ಪಾಲಿಸದೇ ಕಾರ್ಣಿಕ ನುಡಿ ನುಡಿದಿದ್ದಾರೆ ಅಂತ ಆರೋಪಿಸಿದ್ದಾರೆ.
ಇದು ಕಾರ್ಣಿಕವಲ್ಲ, ಗೊರವಯ್ಯ ರಾಮಪ್ಪನ ವಾಣಿ..
ಇದು ದೈವವಾಣಿಯಲ್ಲ ಗೊರವಯ್ಯ ರಾಮಪ್ಪನ ವಾಣಿ ಅಂತ ವೆಂಕಪ್ಪಯ್ಯ ಒಡೆಯರ್ ನೇರವಾಗಿ ಟೀಕಿಸಿದ್ದಾರೆ. ಬೇರೆಯವರ ಅಣತೆಯಂತೆ ಕಾರ್ಣಿಕ ನಡೆಯುತ್ತಿದೆ, ಇದನ್ನು ನಂಬುವುದು, ಬಿಡುವುದು ಭಕ್ತರಿಗೆ ಬಿಟ್ಟಿದ್ದು. ಜಿಲ್ಲಾಧಿಕಾರಿ ಹಾಗೂ ಭಕ್ತರು ಇವರ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಅಂತ ಆಗ್ರಹಿಸಿದ್ದಾರೆ. ಕ್ರಮ ತೆಗೆದುಕೊಳ್ಳದಿದ್ದರೆ ಪ್ರತಿ ವರ್ಷ ಭಕ್ತರಿಗೆ ಕಾರ್ಣಿಕ ನುಡಿಯ ಬಗ್ಗೆ ಗೊಂದಲ ಉಂಟಾಗುತ್ತದೆ. ಹೀಗಾಗಿ ಈ ವರ್ಷದ ಕಾರ್ಣಿಕ ನುಡಿಯ ಬಗ್ಗೆ ನಾನು ವಿಶ್ಲೇಷಣೆ ಮಾಡುವುದಿಲ್ಲ ಎಂದಿದ್ದಾರೆ. ದೇಗುಲದ ಪದ್ಧತಿಯನ್ನು ಅನುಸರಿಸಿದರೆ ಮಾತ್ರ ದೈವವಾಣಿ ನುಡಿಯಲಿಕ್ಕೆ ಸಾಧ್ಯ. ಯಾರ ಅಣತೆಯಂತೆ ಕಾರ್ಣಿಕ ನುಡಿಯುತ್ತಿದಾರೋ ಗೊತ್ತಿಲ್ಲ, ಧಾರ್ಮಿಕ ದತ್ತಿ ಅಧಿಕಾರಿ, ಜಿಲ್ಲಾಧಿಕಾರಿಗಳಿದ್ದಾರೆ. ಅವರೆ ಕ್ರಮ ತೆಗೆದುಕೊಳ್ಳಬೇಕು. ಮೈಲಾರಲಿಂಗೇಶ್ವರ ದೇವರು ಹುಟ್ಟಿದಾಗಿನಿಂದ ನಡೆದಿದ್ದ ಧಾರ್ಮಿಕ ಕಾರ್ಯಗಳು ನಡೆದಿಲ್ಲ. ವೈಯಕ್ತಿಕ ಸಮಸ್ಯೆ, ಜಗಳ, ದ್ವೇಷ ಏನೇ ಇದ್ದರೂ ಭಕ್ತರು ಬಂದಾಗ ಈ ರೀತಿ ಮಾಡಬಾರದು ಅಂತ ಹೇಳಿದ್ದಾರೆ. ಕಾನೂನಾತ್ಮಕವಾಗಿ ಹೋರಾಟ ಮಾಡುತ್ತೇವೆ ಅಂತ ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್ ತಿಳಿಸಿದ್ದಾರೆ.
2021,2022ರ ಕಾರ್ಣಿಕದಲ್ಲಿ ಧರ್ಮದರ್ಶಿ ಯಡವಟ್ಟು ವಿಶ್ಲೇಷಣೆ..!?
2021ರ ಮಾರ್ಚ್ ನಲ್ಲಿ ನಡೆದ ಕಾರ್ಣಿಕ ‘ಮುತ್ತಿನರಾಶಿ ಮೂರು ಪಾಲು ಆತಲೇ ಪರಾಕ್’ ಎಂದಾಗಿತ್ತು, ಆಗ ದೇವಸ್ಥಾನದ ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್ ಅವರು ಮೈಲಾರದ ಕಾರ್ಣಿಕ ವಾಣಿಯನ್ನು ವಿಶ್ಲೇಷಿಸಿದ್ದು, ನೈರುತ್ಯ ಭಾಗದ ಪ್ರಭಾವಿ ಮುಖಂಡ ಮುಂದೆ ರಾಜ್ಯವನ್ನಾಳುತ್ತಾನೆ. ಕುಬೇರನ ಸ್ಥಾನದಲ್ಲಿರುವ ವ್ಯಕ್ತಿ ಮುಂದಿನ ರಾಜಕಾರಣ ಮಾಡ್ತಾನೆ. ಅವರ ಅವಧಿಯಲ್ಲಿ ರಾಜ್ಯದ ಜನರು ಸಂಪನ್ನರಾಗುತ್ತಾರೆ. ಜೊತೆಗೆ ‘ಗಡ್ಡಧಾರಿಯೊಬ್ಬ ಆರು ತಿಂಗಳೊಳಗೆ ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆ’ಎಂದೂ ಧರ್ಮದರ್ಶಿಗಳು ಹೇಳಿದ್ದರು. ಗಡ್ಡಧಾರಿ ಯಾರು ಎನ್ನುವ ಚರ್ಚೆ ನಡೆಯುತ್ತಿತ್ತು. ಕೆಲವರು ಡಿ.ಕೆ.ಶಿವಕುಮಾರ್ ಎಂದರೆ, ಇನ್ನಷ್ಟು ಜನ ಸಿ.ಟಿ.ರವಿ ಹೆಸರನ್ನು ಉಲ್ಲೇಖಿಸುತ್ತಿದ್ದರು. ಈ ಮಾತಿನ ಅರ್ಥದಂತೆ ಆಗಿನ ಸಿಎಂ ಬಸವರಾಜ್ ಬೊಮ್ಮಾಯಿ ಆಗ ತಾನೇ ಸಿಎಂ ಹುದ್ದೆ ಅಲಂಕರಿಸಿ ಸಚಿವ ಸಂಪುಟ ಆಯ್ಕೆಯನ್ನೂ ಮಾಡಿರಲಿಲ್ಲ, ಅದಾಗಲೇ ಆರು ತಿಂಗಳಲ್ಲೆ ಅಧಿಕಾರ ಕಳೆದುಕೊಳ್ಳುವ ಮುನ್ಸೂಚನೆ ಇವರ ಮಾತಿನಿಂದ ವ್ಯಕ್ತವಾಗಿತ್ತು, ಇದರ ಆಧಾರದ ಮೇಲೆ ರಾಜ್ಯದ ನೈಋತ್ಯ ಭಾಗದ ನಾಯಕರು ಯಾರು ಎನ್ನುವ ಗಹನವಾದ ಚರ್ಚೆ ಆರಂಭವಾಗಿತ್ತು. ಬಿಜೆಪಿಯಲ್ಲಿ ಮೂವರು ಸಿಎಂ ಆಗ್ತಾರೆ ಬವಸರಾಜ್ ಬೊಮ್ಮಾಯಿ ಬಳಿಕ ಮತ್ತೊಬ್ಬ ಗಡ್ಡದಾರಿ ಸಿಎಂ ಆಗ್ತಾರೆ ಎಂದು ವಿಶ್ಲೇಷಣೆ ಮಾಡಿದ್ದರು. ಇನ್ನೂ 2022ರ ಫೆಬ್ರವರಿಯಲ್ಲಿ ‘ಮಳೆ ಬೆಳೆ ಸಂಪಾಯಿತಲೇ ಪರಾಕ್’ ಎಂದು ಬಿಲ್ಲನ್ನೇರಿ ರಾಮಪ್ಪ ಗೊರವಯ್ಯ ಕಾರ್ಣಿಕವನ್ನು ನುಡಿದಿದ್ದರು. ಇದನ್ನು ಧರ್ಮದರ್ಶಿಗಳಾದ ವೆಂಕಪ್ಪಯ್ಯ ಒಡೆಯರ್, ‘ಈ ವರ್ಷ ರಾಜ್ಯದಲ್ಲಿ ಮಳೆ, ಬೆಳೆ ಸಮೃದ್ಧಿಯಾಗಲಿದೆ. ರೈತರ ಬಾಳು ಹಸನಾಗಲಿದೆ. ರಾಜ್ಯದ ನೈಋತ್ಯ ಭಾಗದ ಕುಬೇರ ಮೂಲೆಯ ಪ್ರಭಾವಿ ವ್ಯಕ್ತಿ ರಾಜ್ಯಭಾರ ಮಾಡಲಿದ್ದಾರೆ’ ಎಂದು ವಿಶ್ಲೇಷಣೆ ಮಾಡಿದ್ದರು…
ಗಡ್ಡದಾರಿ ಸಿಎಂ ಆದ್ರಾ, ಇಲ್ವಾ..!?
ಬಸವರಾಜ ಬೊಮ್ಮಾಯಿ ಅವರು 6 ತಿಂಗಳು ಮಾತ್ರ ಮುಖ್ಯಮಂತ್ರಿಯಾಗಿರುತ್ತಾರೆ. ನಂತರ ಗಡ್ಡಧಾರಿಯೊಬ್ಬರು ಮುಖ್ಯಮಂತ್ರಿ ಸ್ಥಾನಕ್ಕೇರುತ್ತಾರೆ ಎಂದು ಮೈಲಾರಲಿಂಗೇಶ್ವರ ದೇವಸ್ಥಾನದ ಅರ್ಚಕ ವೆಂಕಪ್ಪಯ್ಯ ಒಡೆಯರ್ ಹೇಳಿದ ಹೇಳಿಕೆ ಸುಳ್ಳಾಗಿತ್ತು. ಬಾಕಿ 17ತಿಂಗಳೂ ಬೊಮ್ಮಾಯಿ ಅವರೇ ಸಿ.ಎಂ. ಆಗಿ ಅಧಿಕಾರ ಅವಧಿ ಪೂರ್ಣಗೊಳಿಸಿದ್ದರು. ಆಗ ಕಾರ್ಣಿಕಧಾರಿ ರಾಮಪ್ಪ, ವೆಂಕಪ್ಪಯ್ಯ ವಿರುದ್ದ ಆರೋಪ ಮಾಡಿದ್ದರು, ಸಿಎಂ ಬದಲಾವಣೆ ಆಗೋದಿಲ್ಲ ಅಂತಾ ನಾನು ಹೇಳಿದ್ದೆ, ಬದಲಾವಣೆ ಆಗಲಿಲ್ಲ, ಧರ್ಮದರ್ಶಿಗಳು ಇಲ್ಲಸಲ್ಲದ ಕಥೆ ಕಟ್ಟಿ ರಾಜಕೀಯ ನಾಯಕರ ವಿಶ್ವಾಸ ಗಳಿಸಲು ಮುಂದಾಗುತ್ತಾರೆ, ಈ ಬಗ್ಗೆ ಜಿಲ್ಲಾಧಿಕಾರಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದರು..
ಧರ್ಮದರ್ಶಿ ಉಚ್ಚಾಟನೆಗೆ ಹೆಚ್ಚಿದ್ದ ಒತ್ತಡ..!
ಧರ್ಮದರ್ಶಿಗಳು ನೀಡಿದ್ದ ಭವಿಷ್ಯ ಸುಳ್ಳಾಗಿರುವ ಕಾರಣಕ್ಕಾಗಿ ಅವರು ದೇವಾಲಯ ಬಿಟ್ಟು ಹೋಗಬೇಕು, ಉಚ್ಚಾಟಿಸಬೇಕೆಂದು ಅಂದು ಗ್ರಾಮಸ್ಥರು ಹಾಗೂ ದೇವಾಲಯದ ಭಕ್ತರು ತಹಶೀಲ್ದಾರ್ ಅವರಿಗೆ ಲಿಖಿತ ಮನವಿ ನೀಡಿದ್ದರು. ಮೈಲಾರ ಲಿಂಗೇಶ್ವರನ ಕಾರ್ಣಿಕಕ್ಕೆ ಇತಿಹಾಸವಿದೆ, ಬರೀ ರಾಜ್ಯದಲ್ಲಿ ಮಾತ್ರವಲ್ಲ ಅಂತರಾಷ್ಟ್ರೀಯ ಮಟ್ಟದಲ್ಲೂ ಜನಪ್ರಿಯತೆಯನ್ನು ಪಡೆದಿದೆ. ಇಲ್ಲಿ ನುಡಿಯಲಾಗುವ ಕಾರ್ಣಿಕದ ಮೇಲೆ ದೇಶದ ಭವಿಷ್ಯ ನಿರ್ಧಾರವಾಗುತ್ತದೆ. ಧರ್ಮದರ್ಶಿಗಳು ದೈವವಾಣಿಯನ್ನು ದುರುಪಯೋಗ ಪಡಿಸಿಕೊಂಡು ಕಾರ್ಣಿಕ ನುಡಿಯ ಬಗ್ಗೆ ಗೊಂದಲ ಮೂಡಿಸಿದ್ದಾರೆ ಎಂದು ಗ್ರಾಮಸ್ಥರು ಸಿಟ್ಟಾಗಿದ್ದರು..
ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ..!
ಇತಿಹಾಸ ಪ್ರಸಿದ್ದಿ ಪಡೆದ ಮೈಲಾರ ಕಾರ್ಣಿಕ ಎಂದಿಗೂ ಸುಳ್ಳಾಗೋದಿಲ್ಲ, ಈ ಹಿಂದೆ ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್ ಕಾರ್ಣಿಕ ವಿಶ್ಲೇಷಣೆ ಮಾಡುವಾಗ ತಪ್ಪು ಮಾಹಿತಿ ನೀಡಿದ್ದರು, ಈಗಲೂ ತಪ್ಪು ಸಂದೇಶ ಸಾರಿ ಭಕ್ತರಲ್ಲಿ ಗೊಂದಲ ಉಂಟು ಮಾಡುತ್ತಿದ್ದಾರೆ, ಗೊರವಯ್ಯನ ಮೇಲಿನ ಕೋಪಕ್ಕೆ ಇಲ್ಲಸಲ್ಲದ ಆರೋಪ ಮಾಡುತ್ತಾ ಇದ್ದಾರೆ, ಇದು ಸರಿಯಾದ ಕ್ರಮ ಅಲ್ಲ ಆಡಳಿತ ಮಂಡಳಿ ಈ ಬಗ್ಗೆ ಪರಿಶೀಲಿಸಬೇಕೆಂದು ಭಕ್ತ ಆಗ್ರಹಿಸಿದೆ.
ನಾಡಿನ ಸುಪ್ರಸಿದ್ದ ದೈವ ವಾಣಿ ನುಡಿಯುವ ಶ್ರೀಮೈಲಾರಲಿಂಗೇಶ್ವರ ಕಾರ್ಣಿಕದ ಬಗ್ಗೆ ಸಾರ್ವಜನಿಕವಾಗಿ ಪದೇ ಪದೇ ಅಪಸ್ವರ ಎತ್ತುವ ಮೂಲಕ ಭಕ್ತರ ನಂಬಿಕೆಗೆ ಘಾಸಿ ಉಂಟು ಮಾಡುವ ಸೇವಾಕರ್ತರಾದ ವೆಂಕಪ್ಪಯ್ಯ ಅವರನ್ನು ಟ್ರಸ್ಟ್ನಿಂದ ಉಚ್ಚಾಟಿಸಬೇಕು, ಈ ಭಾರೀ ಸಂಪಾಯಿತಲೇ ಪರಾಕ್ ಎಂದು ಒಳ್ಳೆಯ ಕಾರ್ಣಿಕವೇ ಆಗಿದೆ, ಆದರೆ ದುರಂಕಾರದಿಂದ ನಾನು ಹೇಳಿದಂತೆ ಎಲ್ಲವೂ ನಡೆಯಬೇಕು ಎನ್ನುವ ವೆಂಕಪ್ಪಯ್ಯ ಅವರು ತಮ್ಮ ಸೇವಾ ವ್ಯಾಪ್ತಿಯನ್ನು ಮರೆತು ಎಲ್ಲವುದರಲ್ಲಿಯೂ ಹಸ್ತಕ್ಷೇಪ ಮಾಡುತ್ತಿದ್ದಾರೆ. ಹಲವಾರು ಸಮುದಾಯಗಳು ದೇವರ ಸೇವಾ ಕೈಂಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ವೆಂಕಪ್ಪಯ್ಯ, ದೇವಸ್ಥಾನ ನಡೆಯುವುದೇ ನನ್ನಿಂದ ಎಂಬುವಂತೆ ಬಿಂಬಿಸಿಕೊಳ್ಳುತ್ತಿದ್ದಾರೆ. ಕಾರ್ಣಿಕವನ್ನು ರಾಜಕೀಯಗೊಳಿಸುವ ಹೇಳಿಕೆ ವೆಂಕಪ್ಪಯ್ಯ ನೀಡುತ್ತಾರೆ. ಇದಕ್ಕೆ ಡಿ.ಕೆ.ಶಿವಕುಮಾರ್ ಅವರ ಪ್ರಕರಣವೇ ಸಾಕ್ಷಿ. ಭಕ್ತರ ಭಾವನೆಗಳಿಗೆ ಧಕ್ಕೆ ಉಂಟು ಮಾಡುವ ಮೂಲಕ ದೇವರ ಬಗ್ಗೆ ಅಪನಂಬಿಕೆ ಬರುವಂತೆ ನಡೆದುಕೊಳ್ಳುತ್ತಿರುವ ವೆಂಕಪ್ಪಯ್ಯ ಅವರನ್ನು ಕೂಡಲೇ ಟ್ರಸ್ಟ್ನಿಂದ ಉಚ್ಚಾಟಿಸಿ ದೇವಸ್ಥಾನದ ಗೌರವ ಮತ್ತು ಭಕ್ತರ ನಂಬಿಕೆ ಕಾಪಾಡಬೇಕು ಎಂದು ಶ್ರೀಮೈಲಾರಲಿಂಗೇಶ್ವರ ಸ್ವಾಮಿಯ ಭಕ್ತರು ಸಾಮಾಜಿಕ ಜಾಲತಾಣಗಳಲ್ಲಿ ಕಿಡಿಕಾರಿದ್ದಾರೆ..
ಒಟ್ಟಾರೆ ಧರ್ಮದರ್ಶಿ ಹಾಗೂ ಗೊರವಯ್ಯನ ಕಿತ್ತಾಟದಿಂದ ಇತಿಹಾಸ ಪ್ರಸಿದ್ದ ದೈವವಾಣಿ ಕಾರ್ಣಿಕಕ್ಕೆ ಕಂಟಕ ಎದುರಾಗಿದೆ, ಕೊಟ್ಯಾಂತರ ಭಕ್ತರಿಗೆ ಅಪನಂಬಿಕೆ ಉಂಟಾಗುವ ಮುನ್ನ ಸಮಸ್ಯೆ ಸರಿಪಡಿಸಲು ಮೈಲಾರಲಿಂಗನೇ ಅವತರಿಸಿ ಬರಬೇಕಾ ಕಾದು ನೋಡಬೇಕಿದೆ..