POWER SAMACHARA | KANNADA NEWS | BREKING NEWS| 30-12-2023..
ದಾವಣಗೆರೆ; ಅದೊಂದು ಊಹೆಗೂ ನಿಲುಕದ ಸ್ಟೋರಿ, ಆ ಐವರು ಸಾವನ್ನಪ್ಪಿ ಬರೋಬ್ಬರಿ ಎರಡ್ಮೂರು ವರ್ಷಗಳು ಕಳೆದಿದ್ರು ಯಾರಿಗೂ ಗೊತ್ತೆ ಇಲ್ಲ, ಇದಕ್ಕಿದ್ದಂತೆ ಆ ಒಂದು ಅಪರಾಧ ಪ್ರಕರಣ ಬಾರಿ ಸಂಚಲನ ಸೃಷ್ಟಿಸಿದೆ, ಆ 5 ಮಂದಿಯ ನಿಗೂಢ ಸಾವಿನ ಸುದ್ದಿ, ಕ್ಷಣಕ್ಕೊಂದು ತಿರುವು ಪಡೆಯುತ್ತಿದ್ರೆ. 5 ಮಂದಿಯ ಅಸ್ತಿ ಪಂಜರಗಳು ಪೊಲೀಸರ ನಿದ್ದೆಗೆಡಿಸಿಬಿಟ್ಟಿವೆ..
ಕೋಟೆನಾಡಿನಲ್ಲಿ ಒಂದಿಲ್ಲೊಂದು ಸಂಚಲನ..!
ಹೌದು.. ಕೋಟೆ ನಾಡು ಚಿತ್ರದುರ್ಗದಲ್ಲಿ ಒಂದಿಲ್ಲೊಂದು ಸಂಚಲನ ಪ್ರಕರಣಗಳು ಹೊರಬರುತ್ತಲೇ ಇವೆ, ಇವತ್ತು ಕೂಡ ಭಾರೀ ಸಂಚನಕ್ಕೆ ಕಾರಣವಾಗಿದ್ದು ಚಿತ್ರದುರ್ಗ. ಚಿತ್ರದುರ್ಗ ನಗರದ ಚಳ್ಳಕೆರೆ ಗೇಟ್ ಬಳಿಯಿರುವ ಪಾಳು ಮನೆಯಲ್ಲಿ 5 ಮಂದಿ ನಿಗೂಢವಾಗಿ ಸಾವನ್ನಪ್ಪಿದ ಪ್ರಕರಣ ಈಗ ಸದ್ದು ಮಾಡ್ತಿದೆ. ಯೆಸ್ ಚಿತ್ರದುರ್ಗ ನಗರದ ಚಳ್ಳಕೆರೆ ಗೇಟ್ ಬಳಿಯಿರುವ ದೊಡ್ಡ ಸಿದ್ದವ್ವನ ಹಳ್ಳಿಯ ನಿವಾಸಿ ಜಗನ್ನಾಥ್ ರೆಡ್ಡಿಯ ಇಡೀ ಕುಟುಂಬವೇ ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡ ಶಂಕೆ ವ್ಯಕ್ತವಾಗಿದ್ದು, ಜಗನ್ನಾಥ್ ರೆಡ್ಡಿ, ಪತ್ನಿ ಪ್ರೇಮ, ಮಗಳು ತ್ರಿವೇಣಿ, ಮಗ ನರೇಂದ್ರ ರೆಡ್ಡಿ, ಕೃಷ್ಣ ರೆಡ್ಡಿ ಮೃತದೇಹದ ಅಸ್ತಿ ಪಂಜರಗಳು ಪತ್ತೆ ಆಗಿವೆ. ತಡರಾತ್ರಿ ಬಾರಿ ಸದ್ದಾದ ಸುದ್ದಿ ಈಗ ಟ್ವಿಸ್ಟ್ ಮೇಲೆ ಟ್ವಿಸ್ಟ್ ಪಡೆದುಕೊಂಡು ತೀವ್ರ ಕುತೂಹಲ ಮೂಡಿಸಿದೆ.
2019ರಲ್ಲೇ ಸಾವನ್ನಪ್ಪಿರುವ ಶಂಕೆ..!
ಜಗನ್ನಾಥ್ ರೆಡ್ಡಿ ಲೋಕೋಪಯೋಗಿ ಇಲಾಖೆಯಲ್ಲಿ ಕಾರ್ಯನಿರ್ವಾಹಕ ಇಂಜಿನಿಯರ್ ಆಗಿ ಕೆಲಸ ಮಾಡ್ತಿದ್ರು ಎಂದು ಹೇಳಲಾಗುತ್ತಿದ್ದು, ಕುಟುಂಬದಲ್ಲಿ ಕೆಲವೊಂದು ಸಮಸ್ಯೆಗಳಿಂದ ಬಾರಿ ಮನನೊಂದು ಇಡೀ ಕುಟುಂಬ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಇನ್ನು ಮನೆಯಲ್ಲಿ ಸಿಕ್ಕ 2019ರ ಕ್ಯಾಲೆಂಡರ್ ಪ್ರಕಾರ ಜಗನ್ನಾಥ್ ರೆಡ್ಡಿ ಕುಟುಂಬದವರು ಮೃತಪಟ್ಟು ಮೂರ್ನಾಲ್ಕು ವರ್ಷಗಳು ಆಗಿರಬಹುದು ಎಂದು ಹೇಳಲಾಗುತ್ತಿದೆ. ಇನ್ನು ಘಟನಾ ಸ್ಥಳಕ್ಕೆ ಪೊಲೀಸರು, ವಿಧಿ ವಿಜ್ಞಾನ ಪ್ರಯೋಗಾಲಯದ ಸಿಬ್ಬಂದಿ, ಬೆರಳಚ್ಚು ತಜ್ಞರು ಭೇಟಿ ನೀಡಿದ್ದು, ಅಸ್ತಿ ಪಂಜರಗಳನ್ನ ನಗರದ ಬಸವೇಶ್ವರ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಇನ್ನು ನಿಗೂಢ ಸಾವಿಗೆ ಕಾರಣ ಹುಡುಕಲು ಪೊಲೀಸರು ಮುಂದಾಗಿದ್ದಾರೆ.
ರಾಬರಿ ಕೇಸ್ ನಿಂದ ಮನನೊಂದಿದ್ರಾ..!
ಜಗನ್ನಾಥ್ ರೆಡ್ಡಿ ಅವರ ಮಗ ನರೇಂದ್ರ ರೆಡ್ಡಿ, ಈ ಹಿಂದೇ ರಾಬರಿ ಕೇಸ್ ಒಂದರಲ್ಲಿ ಜೈಲು ವಾಸ ಅನುಭವಿಸಿದ್ದ, ಈ ಒಂದು ಪ್ರಕರಣದಿಂದ ಇಡೀ ಕುಟುಂಬ ಜರ್ಜರಿತವಾಗಿತ್ತು, ಪತ್ನಿ ಹಾಗೂ ಮಗಳಿಗೆ ಆರೋಗ್ಯದ ಸಮಸ್ಯೆ ಇತ್ತು ಎನ್ನಲಾಗಿದೆ, ಇತ್ತ ಇಬ್ಬರು ಮಕ್ಕಳಿಗೆ ಮದುವೆ ಸೆಟ್ ಆಗಿರಲಿಲ್ಲವಂತೆ, ಜೊತೆಗೆ ಜಮೀನು ವ್ಯಾಜ್ಯದಿಂದ ಕುಟುಂಬ ಬೇಸತ್ತಿತ್ತು ಎನ್ನಲಾಗಿದೆ. ಹೀಗಾಗಿ ಮನನೊಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರಬಹುದು, ಒಳಗೆ ಇದ್ದ ಸಾಕು ನಾಯಿ ಕೂಡ ಆ ಆಹಾರ ಸೇವಿಸಿ ಸಾವನ್ನಪ್ಪಿರಬಹುದು ಎಂಬ ಗುಸು ಗುಸು ಚರ್ಚೆ ನಡೆಯುತ್ತಿದ್ದರು ಯಾವುದಕ್ಕೂ ನಿಖರ ಮಾಹಿತಿ ಸಿಕ್ಕಿಲ್ಲ, ಐದು ಅಸ್ಥಿಪಂಜರ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿರುವ ಚಿತ್ರದುರ್ಗದ SP ಎಸ್ಪಿ ಧರ್ಮೇಂದರ್ ಕುಮಾರ್ ಮೀನಾ, ಹಳೆ ಬೆಂಗಳೂರು ರಸ್ತೆಯ ಮನೆಯಲ್ಲಿ ಅಸ್ಥಿ ಪಂಜರ ಇರುವ ಮಾಹಿತಿ ನಿನ್ನೆ ಸಂಜೆ ಪೊಲೀಸರಿಗೆ ಬಂದಿತ್ತು, ನಮ್ಮ ಸಿಪಿಐ ನಹಿಂ ಟೀಂ ಹೋಗಿ ನೋಡಿದಾಗ ಖಚಿತ ಆಗಿತ್ತು, ಪರಿಪೂರ್ಣವಾಗಿ ಚೆಕ್ ಮಾಡಿದಾಗ ಮೊದಲು 3 ಅಸ್ಥಿ ಪಂಚರ ಕಂಡಿತ್ತು, ಆಗ ನಮ್ಮ FSL ತಂಡ ಕೂಡಾ ಆಗಮಿಸಿತ್ತು, ರಾತ್ರಿ FSL ತಂಡ ಪರಿಶೀಲನೆ ಬಳಿ ಮತ್ತೆ ಇಬ್ಬರ ಅಸ್ಥಿ ಪಂಚರ ಇತ್ತು ಒಟ್ಟು ಐದು ಅಸ್ಥಿ ಪಂಚರ ನಮಗೆ ಖಚಿತವಾಗಿತ್ತು, DIG ತ್ಯಾಗರಾಜನ್ ಅವರು ಕೂಡಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ, ಸುಮಾರು ವರ್ಷಗಳಿಂದ ಮನೆ ಪಾಳು ಬಿದ್ದಿದೆ, ಇವರು ಯಾರ ಜೊತೆ ಕೂಡಾ ಹೆಚ್ಚು ಸಂಪರ್ಕ ಇರಲಿಲ್ಲ, ಇದರಲ್ಲಿ ಕೇವಲ ಕೃಷ್ಣರೆಡ್ಡಿ ಮಾತ್ರ ಹೊರಗೆ ಹೋಗುತ್ತಿದ್ದರು, ಉಳಿದ ನಾಲ್ಕು ಮಂದಿ ಕೂಡಾ ಮನೆಯಲ್ಲೇ ಉಳಿಯುತ್ತಿದ್ದರು, ಸಂಬಂಧಿಕರು ಕೂಡಾ ತುಂಭಾ ದಿನಗಳಿಂದ ಕಂಡಿಲ್ಲ ಎಂದು ಹೇಳಿದ್ದಾರೆ ನಾವು ಕೂಡಾ ಹೆಚ್ಚಿನ ತನಿಖೆ ನಡೆಸಿದ್ದೇವೆ, ಅಕ್ಟೋಬರ್ 2019 ರಲ್ಲಿ ಇವರ ಕುಟುಂಬ ಯಾರ ಸಂಪರ್ಕದಲ್ಲಿ ಇರಲಿಲ್ಲ, ಪವನ್ ಎಂಬ ಸಂಬಂಧಿಯಿಂದ ನಾವು ಕೇಸ್ ತೆಗೆದುಕೊಂಡಿದ್ದೇವೆ, ಬಡಾವಣೆ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಿದ್ದೇವೆ ಬಸವೇಶ್ವರ ಆಸ್ಪತ್ರೆಗೆ ನಾವು ಶವ ರವಾನೆ ಮಾಡಿದ್ದೇವೆ, ವಿಧಿ ವಿಜ್ಞಾನ ಹಿರಿಯ ತಜ್ಞರು ಆಗಮಿಸಿದ್ದು, ಮತ್ತೊಂದು ಬಾರಿ FSL ಗೂ ಕೂಡಾ ಕಳಿಸಿದ್ದೇವೆ, ಇನ್ನೂ ಕೆಲ ಸಾಕ್ಷಿಗಳಿಗಾಗಿ ನಾವು ತನಿಖೆ ನಡೆಸುತ್ತಿದ್ದೇವೆ, ಮರಣೋತ್ತರ ಪರೀಕ್ಷೆ ನಡೆಸಲಾಗುತ್ತದೆ, ಇಲ್ಲಿನ ವರದಿ ಕೂಡಾ ಬರಬೇಕಿದೆ, ಎಲ್ಲಾ ವರದಿ ಬಂದ ಕೂಡಲೇ ವೈಧ್ಯರು ಸಾವಿನ ನಿಖರತೆ ಲಭ್ಯವಾಗುತ್ತದೆ ಎಂದಿದ್ದಾರೆ..
ಜಮೀನು ವ್ಯಾಜ್ಯದಿಂದ ಜರ್ಜರಿತ..!?
ಕೂಲಂಕುಷ ತನಿಖೆಗೆ ಬಡಾವಣೆ ಪೊಲೀಸರು ಮುಂದಾಗಿದ್ದಾರೆ, ಜಗನ್ನಾಥರೆಡ್ಡಿಗೆ ಸೇರಿ ಜಮೀನು ವಿವಾದ ಕೋರ್ಟ್ ನಲ್ಲಿತ್ತ, ದೊಡ್ಡಸಿದ್ದವ್ವನಹಳ್ಳಿ ಬಳಿಯಿದ್ದ ಜಮೀನಿನ ವ್ಯಾಜ್ಯ ಹಿನ್ನೆಲೆ ಪ್ರತಿವಾದಿಗಳನ್ನು ಕರೆಸಿ ವಿಚಾರಣೆ ನಡೆಸಲು ಪೊಲೀಸರ ಮುಂದಾಗಿದ್ದಾರೆ, ದೊಡ್ಡಸಿದ್ದವ್ವನಹಳ್ಳಿಯ ಓರ್ವ, ಚಿತ್ರದುರ್ಗದ ಓರ್ವ ವ್ಯಕ್ತಿಗೆ ವಿಚಾರಣೆಗೆ ಬರಲು ಪೊಲೀಸರ ಸೂಚನೆ ನೀಡಿದ್ದು, ಬಡಾವಣೆ ಠಾಣೆ ಸಿಪಿಐ ನಯೀಮ್ ನೇತೃತ್ವದಲ್ಲಿ ಕಾನೂನು ಕ್ರಮಕ್ಕೆ ಮುಂದಾಗಲಾಗಿದೆ. ಇಂದು ಪೋಸ್ಟ್ ಮಾರ್ಟಂ ನಡೆಸಲಿರುವ ವೈದ್ಯಕೀಯ ಸಿಬ್ಬಂದಿ ಮುಂದಾಗಿದ್ದು, ಶವ ಗುರುತು ಪತ್ತೆಗಾಗಿ ಡಿಎನ್ ಎ ಟೆಸ್ಟ್ ನಡೆಸುವ ಸಾಧ್ಯತೆ ಇದೆ, ಜೆಎಂಐಟಿ ಆವರಣದಲ್ಲಿರುವ ಶವಾಗಾರದಲ್ಲಿ ಪೋಸ್ಟ್ ಮಾರ್ಟಂ ಮಾಡಲು ಸಿದ್ದತೆ ಮಾಡಲಾಗಿದೆ ಎನ್ನಲಾಗಿದೆ, ಪೋಸ್ಟ್ ಮಾರ್ಟಂ ಮೂಲಕ ಸತ್ಯಾಂಶ ಹೊರಬರಲಿದೆ..
ಒಟ್ಟಿನಲ್ಲಿ ಪಾಳು ಮನೆಯಲ್ಲಿ ಸಿಕ್ಕ 5 ಅಸ್ಟಿ ಪಂಜರಗಳ ಸುತ್ತ ನೂರಾರು ಅನುಮಾನಗಳ ಹುತ್ತ ಬೆಳೆಯುತ್ತಾ ಹೋಗ್ತಿದೆ, ಸತ್ತವರು ಯಾರೂ, ಸಿಕ್ಕ ಅಸ್ತಿ ಪಂಜರ ಯಾರದ್ದು, ಯಾವ ಕಾರಣಕ್ಕೆ ಮೃತಪಟ್ಟಿದ್ದಾರೆ, ಯಾಕೆ ಮೃತಪಟ್ಟಿದ್ದಾರೆ, ಕೊಲೆಯೋ, ಆತ್ಮಹತ್ಯೆಯೋ ಅನ್ನೋ ಹಲವಾರು ಯಕ್ಷ ಪ್ರಶ್ನೆಗಳಿಗೆ ಎಫ್ ಎಸ್ ಎಲ್ ವರದಿ ಬಂದು ಪೊಲೀಸರ ತನಿಖೆಯಿಂದ ಸತ್ಯಾಸತ್ಯಾತೆ ತಿಳಿಯಬೇಕಿದೆ..